
ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ಕಾಡಿನಲ್ಲಿ ಚಾರಣ ಹೋಗಿ ನಿತ್ರಾಣಗೊಂಡಿದ್ದ 10 ವಿದ್ಯಾರ್ಥಿಗಳನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು ಮತ್ತು 5 ಹುಡುಗಿಯರು ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಹೊರಟಿದ್ದಾರೆ ಆದರೆ ಕಾಡಿನ ಮಧ್ಯೆ ಬರುತ್ತಿದ್ದಂತೆ ದಾರಿ ತಪ್ಪಿ ಕಾಡಿನಲ್ಲಿ ಅಲೆದು ಅಲೆದು ನಿತ್ರಾಣಗೊಂಡಿದ್ದಾರೆ, ಕೊನೆಗೆ ದಾರಿ ತಪ್ಪಿದ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರು, ಸ್ಥಳಿಯರು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ನಾಪತ್ತೆಯಾಗಿರುವ ಹತ್ತು ಮಂದಿಯ ಹುಡುಕಾಟ ಆರಂಭಿಸಿದ್ದಾರೆ ಆದರೆ ಎಲ್ಲೂ ಪತ್ತೆಯಾಗಿಲ್ಲ ಸಂಜೆ ಆರು ಗಂಟೆಗೆ ಆರಂಭಿಸಿದ ಕಾರ್ಯಾಚರಣೆಯಲ್ಲಿ ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸ್ನೇಕ್ ಆರೀಫ್ ಸೇರಿ ಮಧ್ಯರಾತ್ರಿ 2 ಗಂಟೆಗೆ ವಿದ್ಯಾರ್ಥಿಗಳ ತಂಡವನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆ ತಂದಿದ್ದಾರೆ.
ಚಿತ್ರದುರ್ಗದ ವಿವಿಧ ಕಾಲೇಜಿನ ಐವರು ವಿದ್ಯಾರ್ಥಿನಿಯರು ಮತ್ತು ಐವರು ವಿದ್ಯಾರ್ಥಿಗಳ ತಂಡ ಟೆಂಪೊ ಟ್ರಾವೆಲರ್ ವಾಹನ ಬಾಡಿಗೆಗೆ ಪಡೆದು ಪ್ರವಾಸ ಬಂದಿದ್ದರು. ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ರಾಣಿಝರಿ ಕಡೆಯಿಂದ ಚಾರಣ ಆರಂಭಿಸಬೇಕಿತ್ತು. ಗೂಗಲ್ ಮ್ಯಾಪ್ನಲ್ಲಿ ಬಂಡಾಜೆ ಟ್ರಕ್ಕಿಂಗ್ ಎಂದು ನಮೂದಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ದಿಡಪೆ ಮಾರ್ಗ ತೋರಿಸಿದೆ. ಅಲ್ಲಿಂದ ಚಾರಣ ಆರಂಭಿಸಿದ್ದು, ಬಂಡಾಜೆ ಜಲಪಾತ ತನಕ ಹೋಗಿದ್ದಾರೆ.
ವಾಪಸ್ ಬರಲು ಬಲ್ಲಾಳರಾಯನದುರ್ಗ ಮತ್ತು ರಾಣಿಝರಿ ಕಡೆಯ ಮಾರ್ಗ ಹಿಡಿದಿದ್ದಾರೆ. ಅಷ್ಟರಲ್ಲಿ ಕತ್ತಲಾಗಿದ್ದರಿಂದ ದಾರಿ ತಪ್ಪಿದ್ದಾರೆ. ನೆಟ್ವರ್ಕ್ ಇಲ್ಲದ ಕಾರಣ ಗೂಗಲ್ ಮ್ಯಾಪ್ ಕೂಡ ಕೆಲಸ ಮಾಡಿಲ್ಲ.
ವಿಷಯ ತಿಳಿದು ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತಂದು ಎಲ್ಲರನ್ನೂ ವಾಹನ ಹತ್ತಿಸಿ ಚಿತ್ರದುರ್ಗಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.