
ಹೆಲಿಕಾಪ್ಟರ್ ಒಂದು ನಡುರೋಡಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ಉತ್ತರಾಖಂಡ್ನ ಕೇದಾರನಾಥ ಬಳಿ ತಾಂತ್ರಿಕ ದೋಷದಿಂದ ನಡುರೋಡಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಿರುವ ಘಟನೆ ನಡೆದಿದೆ. ಉತ್ತರಾಖಂಡದ ಕೇದಾರನಾಥ ಧಾಮಕ್ಕೆ ತೆರಳುವ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ರುದ್ರಪ್ರಯಾಗ ಜಿಲ್ಲೆಯ ಗುಪ್ತಕಾಶಿಯಲ್ಲಿ ನಡು ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆಯಲ್ಲಿ ಹೆಲಿಕಾಪ್ಟರ್ನಲ್ಲಿದ್ದ ಎಲ್ಲಾ ಯಾತ್ರಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಉತ್ತರಾಖಂಡ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಡಾ. ವಿ. ಮುರುಗೇಶನ್ ತಿಳಿಸಿದ್ದಾರೆ.
ಕ್ರಿಸ್ಟಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಈ ಹೆಲಿಕಾಪ್ಟರ್ ಸಿರ್ಸಾದಿಂದ ಕೇದಾರನಾಥಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಗೊತ್ತುಪಡಿಸಿದ ಹೆಲಿಪ್ಯಾಡ್ಗೆ ತಲುಪದೆ, ರಸ್ತೆಯ ಮೇಲೆ ಲ್ಯಾಂಡ್ ಆಗಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಎಲ್ಲರನ್ನೂ ಸುರಕ್ಷಿತವಾಗಿ ಕಾಪಾಡಿವೆ.