
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ಕಾಲ್ತುಳಿತ ದುರಂತದಲ್ಲಿ ಸ್ಟೇಡಿಯಂನಲ್ಲಿ ನಡೆದ ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ವಿಧಾನಸೌಧವನ್ನು ಸಿಎಂ ಸಿದ್ದರಾಮಯ್ಯ ಸ್ಟೇಡಿಯಂ ಅನ್ನು ಡಿಕೆ ಶಿವಕುಮಾರ್ ಹಂಚಿಕೊಂಡಂತೆ ಕಾಣುತ್ತಿದೆ.
ಏಕೆಂದರೆ ಸ್ಟೇಡಿಯಂ ಘಟನೆ ಡಿಕೆ ಶಿವಕುಮಾರ್ ತಲೆಗೆ ಕಟ್ಟಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದರೆ, ಇತ್ತ ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್ ಇದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಸ್ಟೇಡಿಯಂಗೆ ಪರ್ಮಿಷನ್ ಕೊಟ್ಟವರು ಪೊಲೀಸರು ಮತ್ತು ಡಿಪಿಎಆರ್ನವರು. ಪೊಲೀಸ್ ಇಲಾಖೆ, ಇಂಟೆಲಿಜೆನ್ಸ್ ಸಿಎಂ ಅಧೀನದಲ್ಲೇ ಬರುತ್ತದೆ. ಅವರ ಪಾಡಿಗೆ ಅವರನ್ನು ಸ್ಟೇಡಿಯಂಗೆ ಬಿಟ್ಟಿದ್ದರೆ ತೊಂದರೆ ಆಗುತ್ತಿರಲಿಲ್ಲ. ನಿಮ್ಮ ತಪ್ಪೇ ಇಲ್ಲ ಅಂದರೆ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರಲ್ಲಿ 11 ಜನ ಅಮಾಯಕರು ಬಲಿಯಾಗಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.