ಸುದ್ದಿಕರ್ನಾಟಕಜಿಲ್ಲೆದೇಶ

ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಭೂಮಿಕ್‌ ಮನೆಗೆ ಭೇಟಿ ನೀಡಿದ್ದ ಬಿಜೆಪಿ ನಿಯೋಗ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ಸಂಭ್ರಮಾಚಾರಣೆ ವೇಳೆ ಕಾಲ್ತುಳಿತ ಸಂಭವಿಸಿ, 16 ಜನ ಸಾವನ್ನಪ್ಪಿದ್ದು, ದುರಂತದಲ್ಲಿ ಹಾಸನದ 19 ವರ್ಷದ ಭೂಮಿಕ್‌ ಕೂಡ ಸಾವನ್ನಪ್ಪಿದ್ದು, ಮೃತ ಭೂಮಿಕ್‌ ಮನೆಗೆ ಬಿಜೆಪಿ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ..

ಬೆಂಗಳೂರು : ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಭೂಮಿಕ್‌ ಅವರ ಮನೆಗೆ ಪ್ರತಿಪಕ್ಷ ನಾಯಕರಾದ ಆರ್‌.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಜೂನ್ 3, 2025ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮೃತ ವಿದ್ಯಾರ್ಥಿ ಭೂಮಿಕ್‌ ಅವರ ತಂದೆ ಡಿ.ಟಿ.ಲಕ್ಷ್ಮಣ ಅವರೊಂದಿಗೆ ಆರ್.ಅಶೋಕ ಮಾತನಾಡಿ, ಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಇದಕ್ಕೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ, ಎಂಜಿನಿಯರಿಂಗ್‌ ವಿದ್ಯಾರ್ಥಿ ಭೂಮಿಕ್‌ ಮೃತಪಟ್ಟಿದ್ದರಿಂದ ಕುಟುಂಬದವರಿಗೆ ಬಹಳ ದುಃಖವಾಗಿದೆ ಎಂದರು.

ಈ ಕುಟುಂಬದವರ ಜಮೀನಿನಲ್ಲಿ 30 ಜನರು ಕೆಲಸ ಮಾಡುತ್ತಿದ್ದಾರೆ. ಇವರ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ. ಆದರೆ, ಈಗ ಒಬ್ಬನೇ ಮಗ ಮೃತಪಟ್ಟಿದ್ದು, ಆ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆರ್‌ಸಿಬಿ ಸಂಭ್ರಮಾಚರಣೆಯನ್ನು ಎರಡು ಮೂರು ದಿನ ಮುಂದೂಡಿದ್ದರೆ ಯಾರಿಗೂ ಸಮಸ್ಯೆಯಾಗುತ್ತಿರಲಿಲ್ಲ ಎಂದು ಈ ಕುಟುಂಬ ಸೇರಿದಂತೆ ಎಲ್ಲರೂ ಹೇಳುತ್ತಿದ್ದಾರೆ. ಕ್ರಿಕೆಟ್‌ನ ಸಂಭ್ರಮಾಚರಣೆ ಜನರಿಗೆ ನೋವು ತಂದಿದೆ. ಈ ಸಾವುಗಳಿಗೆ ನ್ಯಾಯ ಸಿಗಬೇಕು ಎಂದರು.

ಇಂತಹ ಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು ಎಂದು ಭೂಮಿಕ್‌ ಅವರ ತಂದೆ ಹೇಳುತ್ತಿದ್ದಾರೆ. ಭೂಮಿಕ್‌ ಅವರ ತಂದೆ ಸಮಾಧಿಯ ಬಳಿಯೇ ದುಃಖದಿಂದ ಎರಡು ಮೂರು ದಿನ ಕಳೆದಿದ್ದಾರೆ. ಮುಂದೆ ಈ ರೀತಿಯ ಅನಾಹುತ ನಡೆಯಬಾರದು. ಕಾರ್ಯಕ್ರಮ ಮಾಡುವುದು ಬೇಡವೆಂದು ಪೊಲೀಸರು ಸೂಚನೆ ನೀಡಿದ್ದರೂ, ಅದನ್ನು ಪಾಲಿಸಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು ಸೂಕ್ತವಾದ ತನಿಖೆಗೆ ಒಳಪಡಬೇಕು. ನ್ಯಾಯ ಕೊಡಿಸಲು ನಾವೆಲ್ಲರೂ ಹೋರಾಟ ಮುಂದುವರಿಸುತ್ತೇವೆ ಎಂದರು.

ಭೂಮಿಕ್‌ ಅವರ ತಂದೆ ಲಕ್ಷ್ಮಣ ಮಾತನಾಡುತ್ತಾ, “ಇಷ್ಟೊಂದು ಜನಸಂದಣಿಯ ನಡುವೆ ಇಂತಹ ಕಾರ್ಯಕ್ರಮ ಆಯೋಜಿಸಬಾರದಿತ್ತು. ಸರ್ಕಾರಕ್ಕೆ ಇದರ ಗಂಭೀರತೆ ತಿಳಿಯಲಿಲ್ಲವೇ? ನಮ್ಮ ಮಗನ ಪ್ರಾಣ ಹೋಗಿದೆ. ಸರ್ಕಾರದಿಂದ ಪರಿಹಾರ ಬಂದಿದೆ, ಆದರೆ ಆ ಹಣವು ನಮ್ಮ ನಷ್ಟವನ್ನು ತುಂಬೀತೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Lavanya

ಸಮ್ರಾಟ್‌ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ. ಸಿನಿಮಾ ಸುದ್ದಿಗಳ ಬಗ್ಗೆ ಅಪಾರ ಆಸಕ್ತಿ. ಪುಸ್ತಕ ಓದುವುದು, ಸಿನಿಮಾ ವೀಕ್ಷಣೆ, ಹಾಡು ಕೇಳುವುದು ನನ್ನ ಹವ್ಯಾಸಗಳು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker