
ಕಲಬುರಗಿ: ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಎಐಸಿಸಿ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಜಾತಿ ಗಣತಿ ಮರು ಸಮೀಕ್ಷೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ನಿರ್ಧರಿಸಿದಾಗ ತಿಳಿಸುತ್ತೇವೆ ಎಂದರು. ಇನ್ನು ಜಾತಿ ಸಮೀಕ್ಷೆ ನಡೆದಿರುವುದು 10 ವರ್ಷಗಳ ಹಿಂದೆ. ಆಗ ಮತ್ತು ಈಗ ಬಹಳಷ್ಟು ಬದಲಾವಣೆಯಾಗಿದೆ. ಹಲವು ಸಮುದಾಯಗಳು ಓಬಿಸಿನಲ್ಲಿ ಸೇರಿಕೊಂಡಿವೆ. ಅದು ಅಲ್ಲದೆ ಬಹಳಷ್ಟು ಸಾಮಾಜಿಕ ಬದಲಾವಣೆಗಳು ಆಗಿವೆ. ಅವು ಎಲ್ಲವೂ ಜಾತಿ ಸಮೀಕ್ಷೆ ಒಳಗೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಆಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ನವದೆಹಲಿಯಲ್ಲಿ ತಮ್ಮನ್ನು ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಕರ್ನಾಟಕದಲ್ಲಿನ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಪಪಡಿಸಿದರು.
ರಾಜ್ಯದಲ್ಲಿ ಇ.ಡಿ ರೇಡ್
ಕಾಂಗ್ರೆಸ್ ಎಂಎಲ್ಎಗಳ ಮನೆಗಳ ಮೇಲೆ ಇ.ಡಿ ದಾಳಿ ನಡೆದಿರುವ ಕುರಿತು ಹೆಚ್ಚಿನ ಮಾಹಿತಿ ನನಗೆ ಲಭ್ಯವಿಲ್ಲ. ಆದರೆ ಕೇಂದ್ರ ಸರ್ಕಾರ ಇ.ಡಿ.ಯನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಶಾಸಕರ ಮನೆಗಳ ಮೇಲೆ ದಾಳಿ ಮಾಡಿಸಿ, ಭಿನ್ನಾಭಿಪ್ರಾಯ ಉಂಟು ಮಾಡಿ ಪಕ್ಷವನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತೆ ಮಾಡುವ ತಂತ್ರ ಹೆಣೆಯುತ್ತಿದೆ ಎಂದು ಆಪಾದನೆ ಮಾಡಿದರು. ಚುನಾವಣೆಗಳು ನಡೆದು ವರ್ಷಗಳೇ ಕಳೆದಿವೆ. ಆಗ ನಡೆದಿರುವ ಎಲ್ಲ ಘಟನಾವಳಿಗಳನ್ನು ಇಟ್ಟುಕೊಂಡು ಈಗ ದಾಳಿ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು. ಹಿಂದೆ ಹಲವಾರು ಬಾರಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಕೋಟ್ಯಾಂತರ ರೂಪಾಯಿಗಳನ್ನು ಸೀಸ್ ಮಾಡಿದ್ದಾರೆ. ಹಾಗೆ ಮಾಡಿದ ಹಣ ಎಲ್ಲಿದೆ? ಯಾರು ಬಳಿ ಇದೆ? ಯಾರು ಅದಕ್ಕೆ ಲೆಕ್ಕ ಕೊಡುತ್ತಾರೆ? ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಹಲವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಯಡಿಯೂರಪ್ಪ ಹೆಸರನ್ನು ಪ್ರಸ್ತಾಪಿಸಿದರು ಎಂದು ಹೇಳಿದ್ದರು.