
ಬೆಂಗಳೂರು: ಕೆಪಿಸಿಸಿಯ ಮಾಜಿ ಸೈನಿಕ ವಿಭಾಗದ ವತಿಯಿಂದ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಆಯೋಜಿಸಿದ್ದ ಬೃಹತ್ “ಜೈ ಹಿಂದ್ ಸಭಾ” ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಆಪರೇಷನ್ ಸಿಂಧೂರ್ ಯಶಸ್ಸಿನ ಸಂಭ್ರಮ ಆಚರಣೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಜೈ ಹಿಂದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಮಿ ಕ್ಯಾಂಟೀನ್ ವಸ್ತುಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.
ಮಿಲಿಟರಿ ಕ್ಯಾಂಟೀನ್ಗಳಿಗೆ ಕರ್ನಾಟಕ ಸರ್ಕಾರ ಎಕ್ಸೈಸ್ ಡ್ಯುಟಿ ವಿಧಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಹಾಗೆ, ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ನಿವೃತ್ತ ಸೇನಾ ಸಿಬ್ಬಂದಿಯ ಕಲ್ಯಾಣಕ್ಕಾಗಿ ಎಕ್ಸ್ ಸರ್ವಿಸ್ ಮೆನ್ ವೆಲ್ಫೇರ್ ಕಾರ್ಪೊರೇಷನ್ ಸ್ಥಾಪಿಸಬೇಕೆಂಬ ಮನವಿ ಇದೆ. ಅದನ್ನು ಸ್ಥಾಪಿಸುವ ಸಂಬಂಧ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ನೀವೆಲ್ಲ ದೇಶದ ಜತೆಗಿದ್ದೀರಿ. ನಾವು ನಿಮ್ಮ ಜತೆಗಿದ್ದೇವೆ ಎಂದು ಮಾಜಿ ಸೈನಿಕರನ್ನು ಉದ್ದೇಶಿಸಿ ಸಿದ್ದರಾಮಯ್ಯ ಹೇಳಿದರು. ಆರ್ಮಿ ಕ್ಯಾಂಟೀನ್ನಲ್ಲಿ ಮಾರಾಟ ಮಾಡುವ ಮದ್ಯದ ಮೇಲಿನ ತೆರಿಗೆಯನ್ನೂ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಕೆಲವು ದಿನಗಳ ಹಿಂದೆ ತಿಳಿಸಿದ್ದವು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮೂರು ಬಾರಿ ಮದ್ಯದ ದರ ಏರಿಕೆ ಮಾಡಲಾಗಿದೆ. ಅದರ ಬೆನ್ನಲ್ಲೇ ಆರ್ಮಿ ಕ್ಯಾಂಟೀನ್ಗೂ ಅಬಕಾರಿ ಸುಂಕ ವಿಧಿಸುವ ಸುಳಿವಿನ ಬಗ್ಗೆ ವಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.