
ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ತುಮಕೂರಿಗೆ ತೊಂದರೆ ಆಗಲ್ಲ ಅಂತಾ ಅಧಿಕಾರಿಗಳು ತಾಂತ್ರಿಕ ವರದಿ ಕೊಟ್ಟಿದ್ದರು. ವರದಿ ಬಂದ ಬಳಿಕವೇ ಕೆಲಸ ಶುರು ಮಾಡಿದ್ದೇವೆ. ಇದನ್ನ ಬಿಜೆಪಿ ಶಾಸಕರು ಸಹ ಒಪ್ಪಿಕೊಂಡಿದ್ದರು. ಆದರೆ ಈಗ ತಾಂತ್ರಿಕ ವರದಿ ಸರಿ ಇಲ್ಲ ಅಂತಿದ್ದಾರೆ ಎಂದರು.
ಇನ್ನು ತಾಂತ್ರಿಕ ಸಮಿತಿ ವರದಿ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ. ತಾಂತ್ರಿಕವಾಗಿ ಸಮಸ್ಯೆ ಆಗಲ್ಲ ಎಂದು ವರದಿ ಬಂದಿದೆ. ಈ ಸಭೆಯಲ್ಲಿ ತುಮಕೂರು ಬಿಜೆಪಿ ಶಾಸಕರು ಇದ್ದರು. ತುಮಕೂರಿನಿಂದ ರಾಮನಗರಕ್ಕೆ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ 1000 ಕೋಟಿ ರೂ. ಹಣವನ್ನು ಯೋಜನೆಗೆ ಕೊಟ್ಟಿದ್ದೇವೆ, ಹಣ ಕೂಡ ಬಿಡುಗಡೆ ಆಗಿತ್ತು ಎಂದು ಹೇಳಿದರು. ತುಮಕೂರಿಗೆ ತೊಂದರೆ ಇಲ್ಲ ಅಂತಾ ವರದಿ ಹೇಳಿತ್ತು. ಈಗ ಬಿಜೆಪಿ ಶಾಸಕರು ಅಲ್ಲಿ ಹೋಗಿ ಪ್ರತಿಭಟನೆ ಮಾಡ್ತಿದ್ದಾರೆ. ಇವತ್ತಿನ ಪ್ರತಿಭಟನೆ ಬಗ್ಗೆ ವರದಿ ಪಡೆಯುತ್ತೇನೆ. ಮಾಹಿತಿ ಪಡೆದು ಮಾತಾಡುತ್ತೇನೆ ಎಂದರು.
ಶಾಸಕ ಬಿ.ಸುರೇಶ್ ಗೌಡ ಪ್ರತಿಕ್ರಿಯೆ
ಇನ್ನು ಇದೇ ವಿಚಾರವಾಗಿ ಮಾತನಾಡಿದ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ಅವರು, ಜಿಲ್ಲಾಡಳಿತದ ನಿಷೇಧಾಜ್ಞೆ, ಪೊಲೀಸ್ ಕಾವಲು ಏನೇ ಮಾಡಿದರೂ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧದ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದ್ದರು. ಎಕ್ಸ್ಪ್ರೆಸ್ ಕೆನಾಲ್ ವಿರುದ್ಧದ ಹೋರಾಟ ಯಾರೊಬ್ಬರ ಸ್ವಾರ್ಥಕ್ಕಾಗಿ ಅಲ್ಲ. ಜಿಲ್ಲೆಯ ಜನರ, ರೈತರ ಹಿತ ಕಾಪಾಡಲು, ಅದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಜಿಲ್ಲಾಡಳಿತದ ನಿಷೇಧಾಜ್ಞೆ ಉಲ್ಲಂಘಿಸಿ ಹೋರಾಡುತ್ತೇವೆ. ಜಿಲ್ಲೆಯ ಜನರಿಗೆ ಮಾರಕವಾಗುವ ಎಕ್ಸ್ಪ್ರೆಸ್ ಕೆನಾಲ್ ಬೇಡ ಎಂದು ಸದನದಲ್ಲೂ ಸರಕಾರವನ್ನು ಒತ್ತಾಯಿಸಿದ್ದೆವು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಖದ್ದಾಗಿ ಮನವಿ ಮಾಡಿದ್ದೆವು. ಆದರೆ ವಿರೋಧದ ನಡುವೆ ಡಿ.ಕೆ. ಶಿವಕುಮಾರ್ ಹಠಕ್ಕೆ ಬಿದ್ದು ಯೋಜನೆಯ ಕಾಮಗಾರಿ ಮಾಡಿಸಲು ಹೊರಟಿರುವುದು ಸರಿಯಲ್ಲ. ನಿಷೇಧಾಜ್ಞೆ ಜಾರಿ ಮಾಡಿ, ಪೊಲೀಸರ ಕಾವಲಿಟ್ಟು ಹೋರಾಟ ತಡೆಯುವ ಪ್ರಯತ್ನ ಮಾಡುವುದು ಸರಿಯಾದ ಕ್ರಮವಲ್ಲ. ಹೋರಾಟದಲ್ಲಿಏನೇ ಅಚಾತುರ್ಯ ಸಂಭವಿಸಿದರೂ ಅದಕ್ಕೆ ಸರಕಾರವೇ ಹೊಣೆ ಎಂದಿದ್ದರು.