
ಚೆನ್ನೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸದ್ಯ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ-2’, ‘ಛಾವಾ’ದಂತಹ ದೊಡ್ಡ ಹಿಟ್ ಸಿನಿಮಾಗಳಲ್ಲಿ ರಶ್ಮಿಕಾ ನಟನೆಯ ಮೂಲಕ ಮೋಡಿ ಮಾಡಿದ್ದಾರೆ. ತಮಿಳು – ತೆಲುಗು ಸಿನಿಮಾಗಳಲ್ಲೂ ರಶ್ಮಿಕಾ ಸಾಕಷ್ಟು ಅವಕಾಶ ಪಡೆದಿದ್ದು, ಅವರ ಮುಂದಿನ ಸಿನಿಮಾ ‘ಕುಬೇರ’ದ ಮೇಲೆ ನಿರೀಕ್ಷೆ ಹೆಚ್ಚಿದೆ. ಧನುಷ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ಕುಬೇರ’ ಮುಂದಿನ ವಾರ ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದ ಫೋಟೋವನ್ನು ರಶ್ಮಿಕಾ ಹಂಚಿಕೊಂಡಿದ್ದು, ಈ ವೇಳೆ ಅವರು ಫೋಟೋ ಕೆಳಗೆ ಬರೆದುಕೊಂಡಿರುವ ಕ್ಯಾಪ್ಟನ್ ಕನ್ನಡಿಗರ ಟೀಕೆಗೆ ಗುರಿಯಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ‘ಕುಬೇರ’ ಚಿತ್ರದ ಕಾರ್ಯಕ್ರವೊಂದಿತ್ತು. ಇದರಲ್ಲಿ ಧನುಷ್, ನಾಗಾರ್ಜುನ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ರಶ್ಮಿಕಾ ಮಂದಣ್ಣ ಅವರು ಇವೆಂಟ್ನ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿ ನಾವು ‘ಕುಬೇರ’ ಪ್ರಮೋಷನ್ಸ್ ಆರಂಭಿಸಿದ್ದೇವೆ. ಬಹುತೇಕ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ, ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನಾನು ಅಂದು ಸಾಕಷ್ಟು ನಕ್ಕಿದ್ದೇನೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಚೆನ್ನೈ ಮತ್ತು ಅಲ್ಲಿನ ಆತ್ಮೀಯತೆ ಬಗ್ಗೆ ರಶ್ಮಿಕಾ ಮಾತನಾಡಿರುವುದು ಇದೇ ಮೊದಲಲ್ಲ. ಈ ಹಿಂದೆ, ನನ್ನ ಅಪ್ಪ ಇಲ್ಲಿ ಕೆಲಸ ಮಾಡುತ್ತಿದ್ದರಿಂದ, ನಾವು ಚೆನ್ನೈನಲ್ಲಿ ವಾಸಿಸುತ್ತಿದ್ದೆವು. ರಸ್ಕಿನ್ ಎಂಬ ಶಾಲೆಯಲ್ಲಿ ಓದಿದೆ. ಆ ಶಾಲೆ ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಆದಾದ ನಂತರ ನಾವು ಕೂರ್ಗ್ಗೆ ಶಿಫ್ಟ್ ಆದೆವು. ನಾನು ಕಲಿತ ಮೊದಲ ಭಾಷೆ ತಮಿಳು ಎಂದು ಹೇಳಿದ್ದರು.