
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಮತ್ತೆ ಟೋಯಿಂಗ್ ಪ್ರಾರಂಭಿಸುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ಟ್ರಾಫಿಕ್ ಸಮಸ್ಯೆಗೆ ಟೋಯಿಂಗ್ ಮಾಡುತ್ತಿದ್ವಿ. ಮತ್ತೆ ಅದನ್ನು ಜಾರಿಗೆ ತರುತಿದ್ದೇವೆ. ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ಗಳನ್ನು ಬಳಸಿಕೊಂಡು ಟೋಯಿಂಗ್ ಮಾಡುತ್ತೇವೆ ಎಂದು ಹೇಳಿದರು.
ಬಾಡಿಗೆ ಟೋಯಿಂಗ್ ವಾಹನ ಬಳಸದೇ ಇಲಾಖೆಯ ವಾಹನ ಬಳಸಿಕೊಂಡು ಟೋಯಿಂಗ್ ನಡೆಸಲು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.
ಟೋಯಿಂಗ್ ಆರಂಭದ ಬಗ್ಗೆ ಕೆಲ ದಿನಗಳಿಂದಲೇ ಚರ್ಚೆ ನಡೆಯುತ್ತಿತ್ತು. ಈಗ ಸರ್ಕಾರವೇ ಅಧಿಕೃತವಾಗಿ ಟೋಯಿಂಗ್ ಆರಂಭವಾಗುವ ಬಗ್ಗೆ ತಿಳಿಸಿದೆ.